ವಯನಾಡು: ಭೂತಕಾಲದ ತಪ್ಪುಗಳಿಗೆ ವರ್ತಮಾನದ ಶಿಕ್ಷೆಯೇ...?



"ನದಿಯು ತನ್ನ ಹಾದಿಯನ್ನು ಮರಳಿ ಪಡೆದಿದೆ" 
(ಭೂ ವಿಜ್ಞಾನಿ ಡಾ. ಕೆ ಸೋಮನ್) 

smkformedia@gmail.com 


ವಯನಾಡ್  (ಕೇರಳ) :
ಗತ್ತಿನ ಜೀವ ಸಂಕುಲಗಳ ಅಪರೂಪದ ಎಂಟು ತಾಣಗಳಲ್ಲಿ ಭಾರತದ ಪಶ್ಚಿಮಘಟ್ಟವೂ ಒಂದು. ಜಗತ್ತಿನ ಜೀವ ವೈವಿಧ್ಯತೆಯ ತೊಟ್ಟಿಲಂತಿರುವ ಪಶ್ಚಿಮಘಟ್ಟತಾಣ, ಇದೀಗ ಅಭಿವೃದ್ದಿಯ ನೆಪದಲ್ಲಿ ಹಲವು ಅನಾಚಾರಗಳಿಗೆ ಮೌನ ಸಾಕ್ಷಿಯಾಗಿ ನಿಂತಿದೆ.

ಹೌದು ಅಳಿದು ಉಳಿದ ಮನೆಗಳ ತುಂಬೆಲ್ಲಾ ಕೆಸರು. ಗೋಡೆಯ ಮೇಲೆ ಕೆಟ್ಟು ನಿಂತ ಗಡಿಯಾರ, ದುರಂತ ಎರಗಿದ ಸಮಯವನ್ನು ದಾಖಲಿಸಿತ್ತು. ಮನೆಯಂಗಳದಲ್ಲಿ ಬಿದ್ದಿರುವ ತುಂಬು ಕುಟುಂಬದ ಫೋಟೊ, ಆ ಫೋಟೊದಲ್ಲಿ ಇರುವವರು ಮನೆಯಲ್ಲಿಲ್ಲ. ಎಲ್ಲವನ್ನೂ ಆಪೋಶನ ತೆಗೆದುಕೊಂಡ ಕಲ್ಲು–ಕೆಸರಿನ ರಾಶಿಯಿಂದಾಗಿ ತಪ್ಪಿಸಿಕೊಳ್ಳಲಾಗದೆ ಅಪ್ಪಿಕೊಂಡೇ ಸತ್ತ ಕುಟುಂಬದವರು. ಕೂತವರು ಕೂತಲ್ಲೇ, ಮಲಗಿದವರು ಮಲಗಿದಲ್ಲೇ ಪ್ರಾಣ ಕಳೆದುಕೊಂಡಿದ್ದು... 
ಕೇರಳದ ಜನಪ್ರಿಯ ಪ್ರವಾಸಿ ತಾಣ ವಯನಾಡ್‌ನಲ್ಲಿ ಮಂಗಳವಾರ ನಸುಕಿನಲ್ಲಿ ಸಂಭವಿಸಿದ ಭೂಕುಸಿತ ಹಾಗೂ ಉಂಟಾದ ದಿಢೀರ್ ಪ್ರವಾಹವು ಭಾರಿ ಪ್ರಮಾಣದಲ್ಲಿ ಹಾನಿಯನ್ನು ಉಂಟುಮಾಡಿದೆ. ದೊಡ್ಡ ಪ್ರಮಾಣದಲ್ಲಿ ಜೀವಹಾನಿಯಾಗಿದೆ. ಜನರ ಮನೆ, ಆಸ್ತಿ–ಪಾಸ್ತಿ ಹೇಳಹೆಸರಿಲ್ಲದಂತೆ ನಾಶವಾಗಿವೆ. 150ಕ್ಕೂ ಹೆಚ್ಚು ಮಂದಿಯ ಮೃತದೇಹಗಳು ಪತ್ತೆಯಾಗಿವೆ. ಹಲವರು ನಾಪತ್ತೆಯಾಗಿದ್ದಾರೆ. ಅವರ ಪರಿಸ್ಥಿತಿ ಏನಾಗಿದೆ ಎಂಬುದು ಸ್ಪಷ್ಟವಿಲ್ಲ. ಇಡೀ ಹಳ್ಳಿ, ಶಾಲಾ ಕಟ್ಟಡಗಳು, ರಸ್ತೆಗಳು, ಸೇತುವೆಗಳು, ಇತರ ಕಟ್ಟಡಗಳು ಪ್ರವಾಹ ಹಾಗೂ ಭೂಕುಸಿತಕ್ಕೆ ಸಿಲುಕಿ ಧ್ವಂಸಗೊಂಡಿವೆ. ಈ ಪ್ರದೇಶದಲ್ಲಿ ಇದ್ದ ಹಲವು ಕಟ್ಟಡಗಳು ಕಣ್ಮರೆಯಾಗಿವೆ. ವಯನಾಡ್‌ನಲ್ಲಿ ಉಂಟಾಗಿರುವ ದುರಂತವು ಈಗ ಕಣ್ಣಿಗೆ ಗೋಚರವಾಗುತ್ತಿರುವುದಕ್ಕಿಂತ ಭೀಕರವಾಗಿರಬಹುದು. 

ಬೆಟ್ಟಗಳ ಮೇಲಿನಿಂದ ಬಂದ ಮಣ್ಣು ಹಾಗೂ ನೀರಿನ ಸುನಾಮಿಯೊಂದು ಈ ನಯನ ಮನೋಹರ ಪ್ರದೇಶವನ್ನು ಕೆಲವೇ ಗಂಟೆಗಳ ಅವಧಿಯಲ್ಲಿ ಸ್ಮಶಾನದಂತಾಗಿಸಿದೆ. ಭೂತಕಾಲದ ಹಲವು ತಪ್ಪುಗಳಿಗೆ ವರ್ತಮಾನದಲ್ಲಿ ಎದುರಾಗಿರುವ ಶಿಕ್ಷೆಯಂತೆ ಇದು ಕಾಣುತ್ತಿದೆ. ಹಿಂದಿನ ತಪ್ಪುಗಳು ಭವಿಷ್ಯದ ಮೇಲೆಯೂ ಕೆಟ್ಟ ಪರಿಣಾಮ ಉಂಟುಮಾಡುವ ಭೀತಿ ಎದುರಾಗಿದೆ.

ಸರ್ಕಾರಗಳ ಮುಂದೆ, ನಾಗರಿಕ ಸಮಾಜದ ಮುಂದೆ ಈಗ ತಕ್ಷಣಕ್ಕೆ ಇರುವ ಸವಾಲು ರಕ್ಷಣಾ ಕಾರ್ಯವನ್ನು ಭರದಿಂದ ನಡೆಸುವುದು, ಜೀವ ಉಳಿಸಿಕೊಂಡವರಿಗೆ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸುವುದು ಹಾಗೂ ಇನ್ನಷ್ಟು ಹಾನಿ ಆಗದಂತೆ ನೋಡಿಕೊಳ್ಳುವುದು. ವಯನಾಡ್‌ನಲ್ಲಿ ಆಗಿರುವುದು ವ್ಯಕ್ತಿಗತ ಮಟ್ಟದಲ್ಲೂ ಸಮಷ್ಟಿಯ ಮಟ್ಟದಲ್ಲೂ ಅತೀವ ವೇದನೆ ಉಂಟುಮಾಡುವಂಥದ್ದು. ಈ ದುರಂತದ ಕಾರಣದಿಂದಾಗಿ ಆಗಿರುವ ಹಾನಿ ಮತ್ತು ನಷ್ಟ ಎಷ್ಟು ಎಂಬುದು ನಿಖರವಾಗಿ ಇನ್ನೂ ತಿಳಿದಿಲ್ಲ. ದೇಶದ ಸಶಸ್ತ್ರ ಪಡೆಗಳು, ಎನ್‌ಡಿಆರ್‌ಎಫ್‌, ಅಗ್ನಿಶಾಮಕ ದಳ, ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಮಣ್ಣು ಹಾಗೂ ಇತರ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರನ್ನು ಗುರುತಿಸುವ, ಅವರನ್ನು ರಕ್ಷಿಸುವ, ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಸಾಗಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಇವರೆಲ್ಲ ಮೆಚ್ಚುವಂತಹ ಕೆಲಸ ಮಾಡುತ್ತಿದ್ದಾರೆ. ರಕ್ಷಣೆ ಹಾಗೂ ಪರಿಹಾರ ಕಾರ್ಯಗಳು ಇನ್ನೂ ಹಲವು ದಿನಗಳವರೆಗೆ ಮುಂದುವರಿಯುತ್ತವೆ. ನೆಲೆ ಕಳೆದುಕೊಂಡವರಿಗೆ ಪುನರ್ವಸತಿ ಕಲ್ಪಿಸುವ ಕೆಲಸಗಳು ಪೂರ್ಣಗೊಳ್ಳಲು ಸುದೀರ್ಘ ಅವಧಿ ಬೇಕಾಗಬಹುದು. ಭೂಕುಸಿತ ಹಾಗೂ ದಿಢೀರ್ ಪ್ರವಾಹದ ಪರಿಣಾಮವಾಗಿ ಕೊಚ್ಚಿಹೋದ ಕೆಲವು ಸ್ಥಳಗಳನ್ನು ಮತ್ತೆ ನಿರ್ಮಿಸಲು ಎಂದಿಗೂ ಸಾಧ್ಯವಾಗದಿರಬಹುದು. ಏಕೆಂದರೆ ಆ ರೀತಿ ಆಗಿರುವೆಡೆಗಳಲ್ಲಿ ಮೊದಲು ಏನಿತ್ತು ಎಂಬುದರ ಕುರುಹು ಕೂಡ ಈಗ ಕಾಣುತ್ತಿಲ್ಲ. ಹಲವರು ತಮ್ಮ ಕುಟುಂಬದ ಸದಸ್ಯರನ್ನು, ತಮ್ಮದೆನ್ನುವ ವಸ್ತುಗಳನ್ನು ಕಳೆದುಕೊಂಡಿದ್ದಾರೆ. ಅಂಥವರಿಗೆ ನೆರವು ಒದಗಿಸಬೇಕು. ಈಗ ಆಗಿರುವ ದುರಂತದಿಂದ ಹಾಗೂ ಹಿಂದೆ ಆಗಿಹೋಗಿರುವ ಇದೇ ಬಗೆಯ ಇತರ ದುರಂತಗಳಿಂದ ಪಾಠವನ್ನು ಸಹ ಕಲಿಯಬೇಕು. ಕೇರಳವು 2018ರಲ್ಲಿ ಭಾರಿ ಪ್ರವಾಹಕ್ಕೆ ಸಾಕ್ಷಿಯಾಗಿತ್ತು. ಈ ರಾಜ್ಯವು ಹಿಂದೆಯೂ ಭೂಕುಸಿತಗಳನ್ನು, ದಿಢೀರ್ ಪ್ರವಾಹಗಳನ್ನು, ಹವಾಮಾನ ವೈಪರೀತ್ಯಗಳನ್ನು ಕಂಡಿದೆ. ಈಗ ಭೂಕುಸಿತ ಕಂಡಿರುವ ಪ್ರದೇಶದಲ್ಲೇ ಹಿಂದೆಯೂ ಭೂಕುಸಿತ ಸಂಭವಿಸಿದೆ. ಪ್ರಕೃತಿಯ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಯ ಪರಿಣಾಮ ಕೆಟ್ಟದ್ದಾಗಿರುತ್ತದೆ ಎಂಬ ಎಚ್ಚರಿಕೆಗಳನ್ನು ಹಲವರು ನೀಡಿದ್ದರು. ಆದರೆ ಅಂತಹ ಎಚ್ಚರಿಕೆಗಳನ್ನು ಸಂಬಂಧಪಟ್ಟವರು ಕಿವಿಗೆ ಹಾಕಿಕೊಳ್ಳಲಿಲ್ಲ.

ಅರಣ್ಯನಾಶ, ಅತಿಕ್ರಮಣ, ಅನಿಯಂತ್ರಿತ ನಿರ್ಮಾಣ ಚಟುವಟಿಕೆಗಳು ಹಾಗೂ ಗಣಿಗಾರಿಕೆಯಿಂದಾಗಿ ಪಶ್ಚಿಮಘಟ್ಟ ಪ್ರದೇಶಕ್ಕೆ ಎದುರಾಗಿರುವ ಅಪಾಯಗಳ ಬಗ್ಗೆ ಮಾಧವ ಗಾಡ್ಗೀಳ್ ನೇತೃತ್ವದ ಸಮಿತಿಯು 2011ರಲ್ಲಿ ವರದಿ ಸಿದ್ಧಪಡಿಸಿದೆ. ಇಂತಹ ದುರಂತಗಳು ಸಂಭವಿಸಬಹುದು ಎಂಬುದನ್ನು ವರದಿಯು ಊಹಿಸಿತ್ತು, ವಿಕೋಪಗಳನ್ನು ತಡೆಯಲು ಕೆಲವು ಕ್ರಮಗಳನ್ನು ಸೂಚಿಸಿತ್ತು. ಗಾಡ್ಗೀಳ್ ಸಮಿತಿಯ ವರದಿಯನ್ನು ದುರ್ಬಲಗೊಳಿಸುವ ಉದ್ದೇಶದಿಂದ ಸರ್ಕಾರವು ಕೆ. ಕಸ್ತೂರಿರಂಗನ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತು. ದುರ್ಬಲಗೊಳಿಸಿದ ಶಿಫಾರಸುಗಳನ್ನು ಕೂಡ ಅನುಷ್ಠಾನಕ್ಕೆ ತರುವ ಕೆಲಸ ಆಗಲಿಲ್ಲ. ಸರ್ಕಾರವು ರಾಜಕೀಯ ಹಾಗೂ ಇತರ ಒತ್ತಡಗಳಿಗೆ ಮಣಿದು ಎಲ್ಲ ಶಿಫಾರಸುಗಳನ್ನು ನಿರ್ಲಕ್ಷಿಸಿತು. ಈಗ ಪಶ್ಚಿಮಘಟ್ಟ ಪ್ರದೇಶದ ಹಲವೆಡೆ, ಪರಿಸರ ನಾಶ ಹಾಗೂ ಹವಾಮಾನ ಬದಲಾವಣೆಯ ಕಾರಣದಿಂದಾಗಿ ಅವಘಡಗಳು ಸಂಭವಿಸುತ್ತಿವೆ. ವಯನಾಡ್‌ ದುರಂತವು ಇತರ ರಾಜ್ಯಗಳಿಗೂ ಒಂದು ಎಚ್ಚರಿಕೆಯಾಗಬೇಕು.

ದುರಂತದ ವಿವರ:
ಕೇರಳದ ವಯನಾಡ್ ಜಿಲ್ಲೆಯಲ್ಲಿ ಮಂಗಳವಾರ ನಸುಕಿನಲ್ಲಿ ಸಂಭವಿಸಿದ ಸರಣಿ ಭೂಕುಸಿತದಲ್ಲಿ 123 ಮಂದಿ ಸಾವನ್ನಪ್ಪಿದ್ದಾರೆ. ನೂರಾರು ಮಂದಿ ಅವಶೇಷಗಳಡಿ ಸಿಲುಕಿದ್ದು, ಸಾವಿನ ಸಂಖ್ಯೆ ಏರುವ ಸಾಧ್ಯತೆಯಿದೆ.

ಭೀಕರ ದುರಂತದಿಂದಾಗಿ ಜಿಲ್ಲೆಯ ಮೇಪ್ಪಾಡಿ ಪಟ್ಟಣ ವ್ಯಾಪ್ತಿಯ ಮುಂಡಕ್ಕೈ, ಚೂರಲ್‌ಮಲ, ಅಟ್ಟಮಲ ಹಾಗೂ ಸಮೀಪದ ನೂಲ್ಪುಳ ಗ್ರಾಮಗಳು ಅಕ್ಷರಶಃ ಕೊಚ್ಚಿಹೋಗಿವೆ. ಸೋಮವಾರದವರೆಗೂ ಹಸಿರುಹೊದ್ದು ಮಲಗಿ ತಮ್ಮ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದ ಈ ಗ್ರಾಮಗಳು ಸ್ಮಶಾನ ಸದೃಶವಾಗಿ ಬದಲಾಗಿದ್ದು, ಹೊರಲೋಕದ ಸಂಪರ್ಕವನ್ನೇ ಕಡಿದುಕೊಂಡಿವೆ.

ಗ್ರಾಮಸ್ಥರು ಮಲಗಿದ್ದಾಗ ಭೂಕುಸಿತ ಸಂಭವಿಸಿದ್ದು ಸಾವಿನ ಸಂಖ್ಯೆ ಹೆಚ್ಚಲು ಕಾರಣ. ಸಿಹಿ ನಿದ್ದೆಯಲ್ಲಿದ್ದ ಹಲವು ಕುಟುಂಬಗಳು ನಿರ್ನಾಮವಾಗಿವೆ. ಅಮ್ಮನ ತೆಕ್ಕೆಯಲ್ಲಿ ಮಲಗಿದ್ದ ಕಂದಮ್ಮಗಳು, ಮಕ್ಕಳು ಮಣ್ಣನಡಿ ಸಮಾಧಿಯಾಗಿವೆ. ಕೆಸರು ಮೆತ್ತಿಕೊಂಡ ಮೃತದೇಹಗಳನ್ನು ರಕ್ಷಣಾ ಕಾರ್ಯಕರ್ತರು ಎತ್ತಿಕೊಂಡು ಹೋದ ದೃಶ್ಯ ದುರಂತದ ತೀವ್ರತೆಗೆ ಸಾಕ್ಷಿಯಾಗಿದೆ. ಹಲವು ಮೃತದೇಹಗಳು ಅಂಗಾಂಗ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿವೆ.

ಭೂಕುಸಿತಕ್ಕೆ ಭಾರಿ ಮಳೆಯೇ ಕಾರಣ ಎಂದು ಕೇರಳ ಸರ್ಕಾರದ ಮೂಲಗಳು ತಿಳಿಸಿವೆ. ವಯನಾಡ್‌ ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಿಂದಲೂ ಭಾರಿ ಮಳೆಯಾಗುತ್ತಿದೆ. 

ಮಳೆ ಧಾರಾಕಾರವಾಗಿ ಸುರಿಯುತ್ತಿದ್ದಂತೆಯೇ ಭೂಕುಸಿತ ಉಂಟಾದ್ದರಿಂದ ಏನಾಗುತ್ತಿದೆ ಎಂಬುದೇ ಹೆಚ್ಚಿನವರಿಗೆ ತಿಳಿಯಲಿಲ್ಲ. ಭಾರಿ ಶಬ್ದ ಕೇಳಿ ನಿದ್ದೆಯಿಂದ ಎಚ್ಚೆತ್ತಾಗ ಹಲವರ ಕುತ್ತಿಗೆಯವರೆಗೂ ಕೆಸರು ಮತ್ತು ನೀರು ಬಂದಿತ್ತು. ಈ ವೇಳೆ ವಿದ್ಯುತ್‌ ಸಂಪರ್ಕವೂ ಕಡಿತಗೊಂಡಿತ್ತು. ಗ್ರಾಮಸ್ಥರಿಗೆ ಬೆಳಕು ಹರಿದ ಬಳಿಕವಷ್ಟೇ ದುರಂತ ಏನು ಎಂಬುದು ಅರಿವಿಗೆ ಬಂತು. ‘ಭೂಕುಸಿತದಲ್ಲಿ 128 ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ 34 ಮಂದಿಯನ್ನು ಗುರುತಿಸಲಾಗಿದ್ದು, 18 ಮೃತದೇಹಗಳನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ.

ಚಾಮರಾಜನಗರದ ಇಬ್ಬರ ಸಾವು
ಚಾಮರಾಜನಗರ: ಗುಡ್ಡ ಕುಸಿತದಲ್ಲಿ ಚಾಮರಾಜನಗರ ಜಿಲ್ಲೆಯ ಇಬ್ಬರು ಮೃತಪಟ್ಟಿದ್ದು ಹಲವರು ನಾಪತ್ತೆಯಾಗಿದ್ದಾರೆ.

ಮೇಪ್ಪಾಡಿಯಲ್ಲಿ ನೆಲೆಸಿದ್ದ ಪುಟ್ಟಸಿದ್ದಿ (62) ಹಾಗೂ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಚೂರಲ್‌ಮಲ ಗ್ರಾಮದಲ್ಲಿ ನೆಲಸಿದ್ದ ರಾಜನ್‌ ಹಾಗೂ ರಜನಿ, ಚಾಮರಾಜನಗರ ತಾಲ್ಲೂಕಿನ ನಾಗವಳ್ಳಿಯಿಂದ ವಯನಾಡ್‌ನ ಟೀ ಎಸ್ಟೇಟ್‌ನಲ್ಲಿ ಕೆಲಸ ಮಾಡಲು ತೆರಳಿದ್ದ ರತ್ನಮ್ಮ (45) ರಾಜೇಂದ್ರ (55) ದಂಪತಿ ನಾಪತ್ತೆಯಾಗಿದ್ದಾರೆ.

*** 
ಪ್ರಕೃತಿ ಮುನಿಸಿನಿಂದಾಗಿ ನಿಂತ ನೆಲವೇ ಕುಸಿದ ‘ದೇವರ ನಾಡಿ’ನಲ್ಲಿ ಈಗ ಚಿಂತೆಯೇ ಗುಡ್ಡವಾಗುತ್ತಿದೆ. ಎಲ್ಲವನ್ನೂ ಆಪೋಶನ ಪಡೆದು ತಣ್ಣಗೆ, ಆದರೆ ರಭಸದಿಂದ ಹರಿಯುತ್ತಿರುವ ನದಿ ದಂಡೆಯಗುಂಟ ಎತ್ತ ಹೆಜ್ಜೆ ಹಾಕಿದರೂ ನೋವಿನ ನೋಟಗಳೇ ಕಣ್ಣಿಗೆ ಬೀಳುತ್ತಿವೆ. ಬೆಟ್ಟದ ಜೀವಗಳ ಆಕ್ರಂದನದ ಸದ್ದು, ರಭಸದಿಂದ ಹರಿಯುತ್ತಿರುವ ನೀರಿನ ಭೋರ್ಗರೆತವನ್ನೂ ಮೀರಿ ಕೇಳಿಸುತ್ತಿದೆ. 

ಇದು ಪ್ರಕೃತಿಯ ಸೊಬಗನ್ನೇ ಹೊದ್ದುಕೊಂಡಿದ್ದ ಕೇರಳದ ವಯನಾಡ್‌ ಜಿಲ್ಲೆಯ, ಈಗ ಬಹುತೇಕ ನಾಮಾವಶೇಷವೇ ಆಗಿರುವ ನಾಲ್ಕು ಗ್ರಾಮಗಳ ಸದ್ಯದ ಚಿತ್ರಣ. ಬಹು ಹಂತದಲ್ಲಿ ಕುಸಿದ ಗುಡ್ಡಗಳ ನಡುವೆ ಹಲವರ ಬದುಕು, ಅವರ ಕನಸುಗಳು ಸಮಾಧಿಯಾಗಿವೆ. ಉಳಿದದ್ದು ಬಯಲು ಮಾತ್ರ.

ದುರಂತ ಸಂಭವಿಸಿದ 36 ಗಂಟೆಗಳ ನಂತರವೂ ರಕ್ಷಣಾ ಕಾರ್ಯಾಚರಣೆ ಬಿರುಸಿನಿಂದ ಸಾಗುತ್ತಿದೆ. ಅಷ್ಟೇ ಬಿರುಸಾಗಿ ಹರಿಯುತ್ತಿರುವ ನದಿ, ರಕ್ಷಣಾ ಸಿಬ್ಬಂದಿಗೆ ಹೆಚ್ಚಿನ ಸವಾಲೊಡ್ಡುತ್ತಿದೆ. ರಕ್ಷಣೆಗೆ ಸೇನೆ, ನೌಕಾಪಡೆ ನೆರವು ಪಡೆಯಲಾಗಿದೆ. ಎನ್‌ಡಿಆರ್‌ಎಫ್‌ ತಂಡವೂ ಜೊತೆಗೂಡಿದೆ. ಸ್ಥಳೀಯರು ಸಹ ಕೈಜೋಡಿಸಿದ್ದಾರೆ.

ಗುಡ್ಡಕುಸಿತ ಮತ್ತು ಅದನ್ನು ಹಿಂಬಾಲಿಸಿದ ದಿಢೀರ್ ಕೆಸರು ಪ್ರವಾಹದಲ್ಲಿ ಕೊಚ್ಚಿಹೋದ ವಯನಾಡ್‌ನ ಮುಂಡಕ್ಕೈ ಮತ್ತು ಚೂರಲ್‌ಮಲದ ಎಲ್ಲೆಡೆ ಕಾಣಸಿಗುವ ದೃಶ್ಯಗಳಿವು. ಸಂತ್ರಸ್ತರು, ರಕ್ಷಣಾ ಸಿಬ್ಬಂದಿ ಭೂಕುಸಿತದ ಭೀಕರತೆಯನ್ನು ಒಂದೊಂದಾಗಿ ಬಿಚ್ಚಿಡುತ್ತಿದ್ದಾರೆ.

‘ರಾತ್ರಿ 1.30ರ ವೇಳೆಗೆ ದೊಡ್ಡ ಶಬ್ದ ಕೇಳಿಸಿತು. ಎದ್ದು ಹೊರಬಂದು ನೋಡಿದರೆ, ಪ್ರವಾಹದ ನೀರು ಮನೆಯ ಮುಂದೆಯೇ ಹರಿಯುತ್ತಿತ್ತು. ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದವರು ಸಹಾಯಕ್ಕಾಗಿ ಕಿರುಚುತ್ತಿದ್ದರು, ಕೈ ಮೇಲೆ ಎತ್ತುತ್ತಿದ್ದರು. ಆದರೆ, ಪ್ರವಾಹದ ರಭಸ ಎಷ್ಟಿತ್ತೆಂದರೆ, ನೋಡ ನೋಡುತ್ತಲೇ ಎಲ್ಲವೂ ನಡೆದೇಹೋಯಿತು. ಎಲ್ಲವೂ ನಿಂತಿತು ಎಂದು ಭಾವಿಸಿ ಮತ್ತೆ ಮಲಗಿದೆವು. ನಾವಿರುವುದು ಚೂರಲ್‌ಮಲದಲ್ಲಿ. ಮತ್ತೆ ಸುಮಾರು 3.30ಕ್ಕೆ ನಮ್ಮ ಹತ್ತಿರವೇ ಏನೋ ಒಂದು ಶಬ್ದವಾದಂತೆ ಕೇಳಿಸಿತು. ಇನ್ನಷ್ಟು ಜನರು ಕೊಚ್ಚಿ ಹೋಗುತ್ತಿದ್ದರು; ಜೊತೆಗೆ ಮೃತದೇಹಗಳೂ. ನಾವು ಹೇಗೋ ಬದುಕುಳಿದೆವು’ ಎಂದು ತಮ್ಮ ಭೀಕರ ಅನುಭವವನ್ನು ಬಿಚ್ಚಿಟ್ಟರು ಕಾರ್ಮಿಕ ಜಯನ್‌.

‘ನನ್ನ ಹೆಂಡತಿ ಕಡೆಯ ಕುಟುಂಬದ 11 ಮಂದಿ ಕಾಣೆಯಾಗಿದ್ದಾರೆ. ಮುಂಡಕ್ಕೈನಲ್ಲಿ ಅವರ ಮನೆಗಳಿದ್ದವು. ಅವರ ಬಗ್ಗೆ ಏನಾದರೂ ಮಾಹಿತಿ ಸಿಗಬಹುದೇ ಎಂದು ನಾನೀಗ ಇಲ್ಲಿಯೇ ನಿಂತು ಕಾಯುತ್ತಿದ್ದೇನೆ’ ಎನ್ನುತ್ತಾರೆ ಜಯನ್‌. ಇವರ ರೀತಿಯಲ್ಲಿಯೇ ಹಲವರು ತಮ್ಮ ಆಪ್ತರ ಕುರಿತು ಮಾಹಿತಿ ತಿಳಿದುಕೊಳ್ಳಲು ಕಾಯುತ್ತಿದ್ದಾರೆ.

ಬದುಕುಳಿದವರು ಕಂಡಿದ್ದು...

ಕೆಸರಿನಲ್ಲಿ ಸಿಲುಕಿಕೊಂಡವರ ಕಥೆಯೇ ಬೇರೆ.  ‘ಜನರ ಅಳು, ಸಹಾಯಕ್ಕಾಗಿ ಕೈ ಚಾಚುತ್ತಿರುವ ದೃಶ್ಯಗಳು ಎಲ್ಲೆಡೆ ಕಾಣುತ್ತಿದೆ. ಅವರ ಪ್ರೀತಿಪಾತ್ರರ ಜೀವಗಳು ಅವರ ಕಣ್ಣ ಮುಂದೆಯೇ ಹೋಗಿವೆ. ಕೆಸರಲ್ಲಿ ಸಿಲುಕಿರುವ ಕೆಲವರು ತಮ್ಮ ಜೀವ ಉಳಿಸಿಕೊಳ್ಳುವ ಹೋರಾಟದಲ್ಲಿದ್ದರು’ ಎನ್ನುತ್ತಾರೆ ರಕ್ಷಣಾ ಸಿಬ್ಬಂದಿ.

ಗುಡ್ಡ ಕುಸಿತದ ಶಬ್ದ ಕೇಳಿಸಿಕೊಂಡವರು ಜೀವ ಉಳಿಸಿಕೊಳ್ಳಲು ಮನೆಮಂದಿಯನ್ನು ಕಟ್ಟಿಕೊಂಡು ಮನೆಯಿಂದ ದೂರ ಓಡಿಬಂದಿದ್ದಾರೆ. ಕೆಲವರಿಗೆ ಇದು ಸಾಧ್ಯವಾಗಿಲ್ಲ. ‘ನನ್ನ ಅಪ್ಪನನ್ನು ಮಾತ್ರ ರಕ್ಷಿಸಲು ಸಾಧ್ಯವಾಯಿತು. ನಾನು ಅವರನ್ನು ಎತ್ತಿಕೊಂಡು ಕಾಡಿನ ಕಡೆಗೆ ಓಡಿದೆ. ಆದರೆ ತಂಗಿಯನ್ನು ರಕ್ಷಿಸಲಾಗಲಿಲ್ಲ. ಮನೆಯಿಂದ ಹೊರಗೆ ಓಡಿದ ನಮ್ಮಿಬ್ಬರು ಮಕ್ಕಳನ್ನು ನೀರು ಕೊಚ್ಚಿಕೊಂಡು ಹೋಯಿತು. ಆವರು ಕೂಗುತ್ತಲೇ ಇದ್ದರು, ನಾನು ಅಸಹಾಯಕನಾಗಿದ್ದೆ’ ಎಂದು ಗದ್ಗದಿತರಾದರು ಚೂರಲ್‌ಮಲದ ಪ್ರಸನ್ನ.

‘ಭೂಕುಸಿತದ ಭೀಕರತೆಯನ್ನು ಕಣ್ಣಾರೆ ಕಂಡ ಪುಟ್ಟ ಪುಟ್ಟ ಮಕ್ಕಳಿಗೆ ಈಗ ನಿದ್ದೆಯೇ ಬರುತ್ತಿಲ್ಲ. ಕೆಲವು ಗಂಟೆಗಳ ಮಟ್ಟಿಗೆ ಮಲಗಿದರೂ ಭಯದಿಂದ ಬೆಚ್ಚಿ ಎದ್ದು ಕೂರುತ್ತಿದ್ದಾರೆ’ ಎನ್ನುತ್ತಿದ್ದಾರೆ ನಿರಾಶ್ರಿತ ಶಿಬಿರಗಳಲ್ಲಿರುವ ಪೋಷಕರು

ಮೊದಲ ಬಾರಿಗೆ ಭೂಕುಸಿತ ಸಂಭವಿಸಿದಾಗ ಕೆಲವರು ಬದುಕುಳಿದು, ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದರು. ಆದರೆ, ಪ್ರವಾಹದ ತೀವ್ರತೆಗೆ ಅವರು ಅದರಲ್ಲಿಯೇ ಕೊಚ್ಚಿಹೋದರು. ಅವರ ದೇಹದ ಭಾಗಗಳು ಈಗ ಸಿಗುತ್ತಿವೆ. ಕೆಲವರ ಕಾಲು, ಕೆಲವರ ಕೈ...’ ಎನ್ನುತ್ತಾರೆ ಅರುಣ್‌ ದೇವ್‌. ವೈದ್ಯಕೀಯ ನೆರವು ನೀಡುತ್ತಿರುವ ತಂಡದೊಂದಿಗೆ ಅರುಣ್‌ ಕೆಲಸ ಮಾಡುತ್ತಿದ್ದಾರೆ

ಮೃತರ ಕುಟುಂಬಗಳ ಆಕ್ರಂದನ ಮುಗಿಲು ಮುಟ್ಟಿದೆ. ಕಳೆದುಕೊಂಡವರ ಹೆಸರು ಕೂಗುತ್ತಾ, ಅಳುತ್ತಾ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತಿದೆ

ಗಾಯಾಳುಗಳ ತುರ್ತು ಚಿಕಿತ್ಸೆಗೆ ಆಮ್ಲಜನಕ ಸೌಲಭ್ಯವುಳ್ಳ ಆಂಬುಲೆನ್ಸ್‌ ಸೇರಿ ವೈದ್ಯಕೀಯ ಕೇಂದ್ರ ಮತ್ತು ಕಂಟ್ರೋಲ್‌ ರೂಂ ಅನ್ನು ಚೂರಲ್‌ ಮಲದಲ್ಲಿ ಸ್ಥಾಪಿಸಲು ಕೇರಳ ನಿರ್ಧರಿಸಿದೆ.

ವಿದ್ಯಾರ್ಥಿಗಳ ಸೇವೆ

‘ಇವರೆಲ್ಲಾ ನಮ್ಮ ಜೊತೆಯೇ ಇದ್ದವರು. ಇಲ್ಲಿ ನಮ್ಮ ಸ್ನೇಹಿತರಿದ್ದಾರೆ, ಅವರ ಕುಟುಂಬಗಳು ಇವೆ. ನಮ್ಮ ಕೈಯಲ್ಲಿ ದೊಡ್ಡ ದೊಡ್ಡ ಕೆಲಸ ಮಾಡಲು ಸಾಧ್ಯವಿಲ್ಲ. ಆದರೆ, ಅವರಿಗಾಗಿ ನಮ್ಮ ಕೈಲಾದ ಸಣ್ಣ ಸಹಾಯ ಮಾಡುತ್ತಿದ್ದೇವೆ’ ಎನ್ನುತ್ತಾ ಮೇಪ್ಪಾಡಿಯ ಸರ್ಕಾರಿ ಶಾಲೆಯಾದ ಜಿಎಚ್‌ಎಸ್‌ಎಸ್‌ ಪ್ರೌಢಶಾಲೆಯ ಮಕ್ಕಳು ನಿರಾಶ್ರಿತರಿಗಾಗಿ ವಿವಿಧೆಡೆಯಿಂದ ಬಂದಿದ್ದ ಬಟ್ಟೆಗಳನ್ನು ಜೋಡಿಸಿಟ್ಟರು.

ಕಸ್ತೂರಿ ರಂಗನ್ ವರದಿ ವಿರೋಧಿಸಿದ್ದ ಕೇರಳ

 ಗುಜರಾತ್‌, ಮಹಾರಾಷ್ಟ್ರ, ಗೋವಾ, ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಹರಡಿರುವ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಕಾಪಾಡುವ ಬಗ್ಗೆ ಅಧ್ಯಯನ ಮಾಡಿ ವರದಿ ನೀಡಲು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು ನೇಮಿಸಿದ್ದ ಪ್ರೊ.ಮಾಧವ ಗಾಡ್ಗೀಳ್ ನೇತೃತ್ವದ ಸಮಿತಿ 2011ರಲ್ಲಿ ಮತ್ತು ಪ್ರೊ.ಕಸ್ತೂರಿ ರಂಗನ್ ನೇತೃತ್ವದ ಮತ್ತೊಂದು ಸಮಿತಿ 2013ರಲ್ಲಿ ಸಲ್ಲಿಸಿ‌‌‌ದ್ದ ವರದಿಗಳನ್ನು ಕೇರಳ ಸರ್ಕಾರ ವಿರೋಧಿಸಿತ್ತು.   


ಕೇರಳದ 14 ಜಿಲ್ಲೆಗಳ ಪೈಕಿ 12 ಜಿಲ್ಲೆಗಳಲ್ಲಿರುವ 123 ಹಳ್ಳಿಗಳ ವ್ಯಾಪ್ತಿಯ 13,108 ಚದರ ಕಿ.ಮೀ ಭೂಪ್ರದೇಶವನ್ನು ಪರಿಸರ ಸೂಕ್ಷ್ಮ ಭೂಪ್ರದೇಶ ಎಂದು ಪರಿಗಣಿಸಬೇಕು ಎಂಬುದಾಗಿ ಕಸ್ತೂರಿ ರಂಗನ್ ವರದಿ ಶಿಫಾರಸು ಮಾಡಿತ್ತು. 123 ಹಳ್ಳಿಗಳ ಪೈಕಿ 60 ಹಳ್ಳಿಗಳು ಇಡುಕ್ಕಿ ಮತ್ತು ವಯನಾಡ್ ಜಿಲ್ಲೆಗಳಿಗೆ ಸೇರಿವೆ. ಈ ಹಳ್ಳಿಗಳ ವ್ಯಾಪ್ತಿಯಲ್ಲಿ ಗಣಿಗಾರಿಕೆ, ಕ್ವಾರಿ, ಮರ ಕಡಿಯುವುದು, ಕೈಗಾರಿಕೆ ಸ್ಥಾಪನೆ ಮತ್ತು ಕಟ್ಟಡ ನಿರ್ಮಾಣದಂಥ ಚಟುವಟಿಕೆಗಳ ಮೇಲೆ ಹಲವು ನಿರ್ಬಂಧಗಳನ್ನು ವಿಧಿಸಿ ಕೇಂದ್ರ ಸರ್ಕಾರವು ನವೆಂಬರ್ 2013ರಲ್ಲಿ ಎರಡು ಆದೇಶಗಳನ್ನು ಜಾರಿ ಮಾಡಿತ್ತು. ಅದನ್ನು ವಿರೋಧಿಸಿ ‘ಪಶ್ಚಿಮ ಘಟ್ಟ ಜನ ಸಂರಕ್ಷಣಾ ಸಮಿತಿ’ಯ ಅಡಿ ಕೇರಳದಲ್ಲಿ ಪ್ರತಿಭಟನೆಗಳು ಆರಂಭವಾದವು. ‌

ವ್ಯಾಪಕ ಪ್ರತಿಭಟನೆಗಳ ಕಾರಣ, ರಾಜ್ಯದ ಪರಿಸರ ಸೂಕ್ಷ್ಮ ಪ್ರದೇಶವನ್ನು ಕಡಿಮೆ ಮಾಡಬೇಕು ಎಂದು ಕೇರಳ, ಕೇಂದ್ರ ಸರ್ಕಾರವನ್ನು ಕೋರಿತು. ಅದರ ಮನವಿಗೆ ಸ್ಪಂದಿಸಿದ ಕೇಂದ್ರವು, ಮೊದಲಿನ 13,108 ಚದರ ಕಿ.ಮೀ ವ್ಯಾಪ್ತಿಯಲ್ಲಿ 3100 ಚ.ಕಿ.ಮೀ ಪ್ರದೇಶವನ್ನು ಕೈಬಿಟ್ಟು, 9,994 ಚ.ಕಿ.ಮೀ ಭೂಭಾಗವನ್ನು ಮಾತ್ರ ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಿತು. ಅದರಲ್ಲಿ, 9,107 ಚ.ಕಿ.ಮೀ ಅರಣ್ಯ ಪ್ರದೇಶವಾಗಿದ್ದರೆ, 887 ಚ.ಕಿ.ಮೀ ಅರಣ್ಯೇತರ ಪ್ರದೇಶವಾಗಿದೆ. ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು ಇದುವರೆಗೆ ಐದು ಬಾರಿ (2014, 2015, 2017, 2018 ಮತ್ತು 2022) ಕಸ್ತೂರಿ ರಂಗನ್ ವರದಿ ಜಾರಿ ಸಂಬಂಧ ಕರಡು ಅಧಿಸೂಚನೆ ಪ್ರಕಟಿಸಿ, ಆಕ್ಷೇಪಗಳನ್ನು ಆಹ್ವಾನಿಸಿದೆ. ಪ್ರತಿ ಬಾರಿಯೂ ಪ್ರತಿಭಟನೆ, ವಿರೋಧ ರಾಜಕೀಯ ಮೇಲಾಟಗಳು ನಡೆದು ವರದಿ ಜಾರಿ ವಿಚಾರ ಹಾಗೆಯೇ ಉಳಿಯುತ್ತಿದೆ.

ವರದಿ ಕುರಿತು ಕೇರಳದ ವಾದವೇನು?   

ಪರಿಸರ ಸೂಕ್ಷ್ಮ ಪ್ರದೇಶಗಳು ಎಂದು ಗುರುತಿಸಿರುವ ಭೂಭಾಗಗಳಲ್ಲಿ ದಟ್ಟ ಜನವಸತಿ ಇದೆ

l ವರದಿ ಜಾರಿಯಾದರೆ, 123 ಹಳ್ಳಿಗಳ ಸಾವಿರಾರು ಕುಟುಂಬಗಳನ್ನು ಸ್ಥಳಾಂತರ ಮಾಡಿ, ಪುನರ್ವಸತಿ ಕಲ್ಪಿಸಬೇಕಾಗುತ್ತದೆ

l ವರದಿಯು ರೈತ ವಿರೋಧಿಯಾಗಿದ್ದು, ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ

l ಹೈನುಗಾರಿಕೆ, ಮೀನು ಸಾಕಾಣಿಕೆ ಮೇಲೆ ನಿರ್ಬಂಧ ವಿಧಿಸಲಾಗುತ್ತದೆ

l ವರದಿ ಜಾರಿಯಿಂದ ಅಭಿವೃದ್ಧಿ ಚಟುವಟಿಕೆಗಳಿಗೆ ತೊಡಕು ಉಂಟಾಗಲಿದೆ

l ಪಶ್ಚಿಮ ಘಟ್ಟಗಳಲ್ಲಿ ವಾಸವಾಗಿರುವ ಬುಡಕಟ್ಟು ಸಮುದಾಯಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ

ಪೂತ್ತುಮಲ ಭೂಕುಸಿತ ಮರೆಯುವ ಮುನ್ನವೇ..

ಪೂತ್ತುಮಲ ಎನ್ನುವುದು ವಯನಾಡ್ ಜಿಲ್ಲೆಯ ಮೇಪ್ಪಾಡಿ ಸಮೀಪದ ಒಂದು ಹಳ್ಳಿ. 2019ರ ಆಗಸ್ಟ್ 8ರಂದು ಮುಂಗಾರು ಸಂದರ್ಭದಲ್ಲಿ ಪೂತ್ತುಮಲ ಗ್ರಾಮದ ಸುತ್ತಮತ್ತ 24 ಗಂಟೆಗಳಲ್ಲಿ 50 ಸೆಂ.ಮೀ. ಮಳೆ ಸುರಿದಿತ್ತು. ಅದರ ಪರಿಣಾಮವಾಗಿ ಗ್ರಾಮದಲ್ಲಿ ಭೂಕುಸಿತ ಸಂಭವಿಸಿತ್ತು. ಅದು ಎಷ್ಟು ತೀವ್ರವಾಗಿತ್ತು ಎಂದರೆ, 20 ಹೆಕ್ಟೇರ್‌ನಷ್ಟು ಭೂಮಿಯು 2 ಕಿಮೀನಷ್ಟು ದೂರಕ್ಕೆ ಸರಿದಿತ್ತು. 100 ಎಕರೆಯಷ್ಟು ಟೀ ತೋಟ ಕೊಚ್ಚಿಹೋಗಿತ್ತು. ವಯನಾಡ್ ಜಿಲ್ಲೆಯ ಸುಮಾರು 25,000 ಹೆಕ್ಟೇರ್ ಪ್ರದೇಶದಲ್ಲಿ ಫಲವತ್ತಾದ ಭೂಮಿಯ ಎರಡು ಸೆಂಟಿಮೀಟರ್‌ನಷ್ಟು ಮೇಲ್ಮೈ ಕೊಚ್ಚಿಕೊಂಡು ಹೋಗಿತ್ತು. 17 ಜನರು ಮೃತಪಟ್ಟಿದ್ದರು.

ಪಶ್ಚಿಮ ಘಟ್ಟಗಳ ಸೂಕ್ಷ್ಮ ಪರಿಸರವನ್ನು ಒಳಗೊಂಡಿರುವ ವಯನಾಡ್‌ನ 102.6 ಚದರ ಕಿ.ಮೀ. ಪ್ರದೇಶವು ತೀವ್ರ ಭೂಕುಸಿತದ ಅಪಾಯದ ಭೂಭಾಗವಾಗಿದ್ದರೆ, 196.6 ಚದರ ಕಿ.ಮೀ. ಪ್ರದೇಶವು ಮಧ್ಯಮ ಶ್ರೇಣಿಯ ಭೂಕುಸಿತದ ಅಪಾಯದ ಭೂಭಾಗ ವಾಗಿದೆ. ಹವಾಮಾನ ಬದಲಾವಣೆಯಿಂದ ಭೂಕುಸಿತದ ಅಪಾಯ ಹೆಚ್ಚಾಗಿರುವ ಇರುವ ಭೂಪ್ರದೇಶ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದರು.

ಎಲ್ಲ ಜಿಲ್ಲೆಗಳಲ್ಲಿ ಭೂಕುಸಿತದ ಅಪಾಯ 

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಅಂಗಸಂಸ್ಥೆ ರಾಷ್ಟ್ರೀಯ ದೂರ ಸಂವೇದಿ ಕೇಂದ್ರವು (ಎನ್‌ಆರ್‌ಎಸ್‌ಸಿ) ದೂರ ಸಂವೇದಿ ದತ್ತಾಂಶ ಆಧರಿಸಿ, ಕಳೆದ ವರ್ಷದ ಫೆಬ್ರುವರಿಯಲ್ಲಿ ದೇಶದ ಭೂಕುಸಿತದ ನಕ್ಷೆಯನ್ನು (Landslide Atlas of India) ಸಿದ್ಧಪಡಿಸಿದೆ. 

ಹಿಮಾಲಯ, ಪಶ್ಚಿಮ ಘಟ್ಟಗಳು ಸೇರಿದಂತೆ ದೇಶದ 17 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿರುವ ಮತ್ತು ಭೂಕುಸಿತದ ಸಾಧ್ಯತೆ ಇರುವ ನಿರ್ದಿಷ್ಟ ಜಿಲ್ಲೆ, ಸ್ಥಳಗಳನ್ನು ಈ ನಕ್ಷೆಯಲ್ಲಿ ಗುರುತಿಸಲಾಗಿದೆ. 

ಭೂಕುಸಿತದ ಅಪಾಯ ಎದುರಿಸುತ್ತಿರುವ 147 ಜಿಲ್ಲೆಗಳನ್ನು ಪಟ್ಟಿ ಮಾಡಲಾಗಿದ್ದು, ಸಾಮಾಜಿಕ–ಆರ್ಥಿಕ ಮಾನದಂಡದ ಆಧಾರದಲ್ಲಿ ರ‍್ಯಾಂಕಿಂಗ್‌ ಕೂಡ ನೀಡಲಾಗಿದೆ. 

ಈ ಪಟ್ಟಿಯಲ್ಲಿ ಕೇರಳದ ಎಲ್ಲ ಜಿಲ್ಲೆಗಳೂ ಸ್ಥಾನ ಪಡೆದಿವೆ. ರಾಜ್ಯದ 14 ಜಿಲ್ಲೆಗಳ ಪೈಕಿ 13 ಜಿಲ್ಲೆಗಳು ಮೊದಲ 50 ರ‍್ಯಾಂಕಿಂಗ್‌ನಲ್ಲಿ ಸ್ಥಾನ ಪಡೆದಿವೆ. 20ರ ಒಳಗಡೆ ಏಳು ಜಿಲ್ಲೆಗಳಿವೆ. ಈಗ ಮಹಾ ದುರಂತಕ್ಕೆ ಸಾಕ್ಷಿಯಾಗಿರುವ ವಯನಾಡ್‌ 13ನೇ ಸ್ಥಾನದಲ್ಲಿದೆ. ಉತ್ತರಾಖಂಡದ ರುದ್ರಪ್ರಯಾಗ್‌ ಮೊದಲ ಸ್ಥಾನದಲ್ಲಿದೆ. ಅದೇ ರಾಜ್ಯದ ಟಿಹರಿ ಗಢವಾಲ್‌ ಎರಡನೇ ಸ್ಥಾನದಲ್ಲಿದೆ. 

ಕರ್ನಾಟಕದ ಕೊಡಗು ಜಿಲ್ಲೆ 12ನೇ ಸ್ಥಾನದಲ್ಲಿದೆ. ಹಾಸನ ಮತ್ತು ದಕ್ಷಿಣ ಕನ್ನಡ ಕ್ರಮವಾಗಿ 53 ಮತ್ತು 54ನೇ ಸ್ಥಾನದಲ್ಲಿವೆ. 

ಪ್ರವಾಹದ ದುಃಸ್ವಪ್ನ

2018ರ ಆಗಸ್ಟ್‌ 14ರಿಂದ 19ರ ನಡುವೆ ಕೇರಳದಲ್ಲಿ ಸುರಿದ ಭಾರಿ ಮಳೆಗೆ 14 ಜಿಲ್ಲೆಗಳ ಪೈಕಿ 13 ಜಿಲ್ಲೆಗಳಲ್ಲಿ ಪ್ರವಾ‌‌ಹ ಉಂಟಾಗಿ ಅಪಾರ ಸಾವು ನೋವು ಉಂಟಾಗಿತ್ತು. 480ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದರು. ಆಸ್ತಿಗೆ ಭಾರಿ ಹಾನಿಯಾಗಿತ್ತು. 1924ರಲ್ಲಿ ಉಂಟಾಗಿದ್ದ ನೆರೆಯ ನಂತರ ಆ ಮಟ್ಟಿಗಿನ ಭೀಕರ ಪ್ರವಾಹ ಸ್ಥಿತಿಯನ್ನು ಕೇರಳ ಕಂಡಿರಲಿಲ್ಲ.  

ಆಗಸ್ಟ್‌ ಮೊದಲ ಆರಂಭದಲ್ಲಿ ಶುರುವಾದ ಮಳೆ ಎರಡನೇ ವಾರದಲ್ಲಿ ತೀವ್ರಗೊಂಡಿತ್ತು. ಆಗಸ್ಟ್‌ 1ರಿಂದ 19ರ ನಡುವೆ ರಾಜ್ಯದಲ್ಲಿ 75.86 ಸೆಂ.ಮೀ ಮಳೆಯಾಗಿತ್ತು.

ಇಡುಕ್ಕಿ ಜಲಾಶಯ ಸೇರಿದಂತೆ ರಾಜ್ಯದ ಎಲ್ಲ ಜಲಾಶಯಗಳಿಂದ ಅನಿವಾರ್ಯವಾಗಿ ಹೆಚ್ಚು ನೀರು ಹೊರಗೆ ಬಿಡಬೇಕಾಯಿತು. ಇದರೊಂದಿಗೆ ಮಳೆಯೂ ತೀವ್ರವಾಗಿದ್ದರಿಂದ ನೆರೆ ಸೃಷ್ಟಿಯಾಗಿ, ಭೂಕುಸಿತ ಸಂಭವಿಸಿ ಸಾವಿರಾರು ಜನ ಮನೆಗಳನ್ನು ಕಳೆದುಕೊಳ್ಳಬೇಕಾಯಿತು. ಕೇರಳದ ಜನರನ್ನು ಈ ಪ್ರವಾಹ ದುಃಸ್ವಪ್ನವಾಗಿ ಇನ್ನೂ ಕಾಡುತ್ತಿದೆ. 

ಆಧಾರ: ಇಸ್ರೊದ ಎನ್‌ಆರ್‌ಎಸ್‌ಸಿ ಭೂಕುಸಿತ ನಕ್ಷೆ ವರದಿ, 2018ರ ಕೇರಳ ಪ್ರವಾಹ ಕುರಿತ ಕೇಂದ್ರ ಜಲ ಆಯೋಗದ ವರದಿ ಮತ್ತು ರಾಜೀವ್‌ ಗಾಂಧಿ ಇನ್‌ಸ್ಟಿಟ್ಯೂಟ್‌ ಆಫ್‌ ಡೆವೆಲಪ್‌ಮೆಂಟ್‌ ಸ್ಟಡೀಸ್‌, ಕೇರಳ ಸರ್ಕಾರದ ಜೀವ ವೈವಿಧ್ಯ ಮಂಡಳಿಯ ವರದಿ. 


ಪೂರಕ ಮಾಹಿತಿ:  ಭವಿತ್ ಉಳ್ಳಾಲ.  ವಸಂತ್ ಸಲ್ಯಾನ್ 

ಆಧಾರ: ಪತ್ರಿಕಾ ವರದಿ. India Today. ಪಿಟಿಐ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

High alert in Sharavati project area. ಭಾರತ ಮತ್ತು ಪಾಕಿಸ್ತಾನ ನಡುವೆ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವ ಕಾರಣ ಶರಾವತಿ ಕಣಿವೆ ಯೋಜನಾ ಪ್ರದೇಶದಲ್ಲಿ ಕರ್ನಾಟಕ ವಿದ್ಯುತ್‌ ನಿಗಮದ (ಕೆಪಿಸಿ) ಭದ್ರತಾ ವ್ಯವಸ್ಥೆಯನ್ನು ಹೈ ಅಲರ್ಟ್ ಮಾಡಿ ಇರಿಸಲಾಗಿದೆ.

ಚಂದ್ರಗ್ರಹಣ: ಸಿಗಂದೂರಿನಲ್ಲಿ ಯಾವುದೇ ಬದಲಾವಣೆ ಇಲ್ಲ.

ಯೋಜನಾ ಸಂತ್ರಸ್ತರು ಹಾಗೂ ಭೂ ಹಕ್ಕಿನ ಸಮಸ್ಯೆ ನಿವಾರಣೆಗೆ ಟಾಸ್ಕ್ ಫೋರ್ಸ್ ರಚನೆ ಅಗತ್ಯ: ಸಚಿವ ಎಸ್ ಮಧು ಬಂಗಾರಪ್ಪ